ದೀಪಗಳ ಹಬ್ಬ ದೀಪಾವಳಿ . ಮನುಕುಲವನ್ನು ಅಂಧಕಾರದಿಂದ ಬೆಳಕಿನತ್ತ ತರುವ ಹಬ್ಬ ದೀಪಾವಳಿ . ಮನೆಯ ಮನದ ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ಹಚ್ಚುವ ಹಬ್ಬ ದೀಪಾವಳಿ. ಇಷ್ಟೆಲ್ಲಾ ವೈಭವದಿಂದ ಕೂಡಿದ ದೀಪಾವಳಿ ಎಲ್ಲರ ತನು ಮನವನ್ನು ಬೆಳಗಿಸುವ ಬೆಳಕಿನ ಹಬ್ಬವಾಗಿದೆ.
ದೇಶಾದ್ಯಂತ ಆಚರಿಸುವ ಈ ಹಬ್ಬಕ್ಕೆ ಹಲವು ಪೌರಾಣಿಕ ಹಿನ್ನಲೆಗಳಿವೆ. ಶ್ರೀಮನ್ನಾರಾಯಣ ವರಾಹವತಾರವೆತ್ತಿ ಲೋಕವನ್ನು ಉದ್ದರಿಸಿದ ಬಳಿಕ ಅವರ ದೇಹದಿಂದ ಬಿದ್ದ ಒಂದು ತೊಟ್ಟು ಬೆವರು ಅಸುರಾಕೃತಿಯನ್ನು ಪಡೆದು ಮುಂದೆ ಅವನು ನರಕಾಸುರನಾದನಂತೆ . ರಾಕ್ಷಸ ಪ್ರವೃತ್ತಿಯ ಇವನು ಕೊನೆಗೆ ಶ್ರೀಕೃಷ್ಣನಿಂದ ಸಂಹಾರವಾಗುತ್ತಾನೆ. ನರಕಾಸುರನ ತಾಯಿಯ ಕೋರಿಕೆಯ ಮೇರೆಗೆ ಅವನನ್ನು ಎಲ್ಲರೂ ನೆನೆಪಿಸಿಕೊಳ್ಳೋದಕ್ಕೋಸ್ಕರ ಶ್ರೀಕೃಷ್ಣ ಈ ಹಬ್ಬವನ್ನು ಸ್ಥಾಯಿಗೊಳಿಸಿದ ಎಂಬುದು ಪ್ರತೀತಿ . ಆ ದಿನದ ನೆನಪೇ ನರಕ ಚತುದರ್ಶಿ. ದೀಪಾವಳಿಯ ಅಮಾವಾಸ್ಯೆಯ ದಿನ ಪಿತೃಗಳಿಗೆ ತರ್ಪಣವನಿತ್ತು ಶ್ರದ್ದಾ ವಿಧಿಗಳನ್ನು ತೀರಿಸಿ ಜನರು ತಮ್ಮ ಅಗಲಿದ ಹಿರಿಯರಿಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುವ ಪರಿಪಾಠವಿದೆ. ಲಕ್ಷ್ಮಿ ಹಬ್ಬವನ್ನು ಆಚರಿಸುವುದು ಈ ಹಬ್ಬದ ಮತ್ತೊಂದು ವೈಶಿಷ್ಟ್ಯ. ಇನ್ನು ಬಲಿಚಕ್ರವರ್ತಿಯನ್ನು ನೆನಪಿಸಿಕೊಳ್ಳುವ ದಿನವೇ ಬಲಿಪಾಡ್ಯಮಿ . ಹೀಗೆ ನರಕ ಚತುದರ್ಶಿ , ಅಮಾವಾಸ್ಯೆ , ಬಲಿಪಾಡ್ಯಮಿ ದಿನಗಳನ್ನೊಳಗೊಂಡ ದೀಪಾವಳಿ ಹಬ್ಬ ಸಂಭ್ರಮದಿಂದ ಕೂಡಿರುತ್ತೆ .
ಮಕ್ಕಳ ಅತ್ಯಂತ ನೆಚ್ಚಿನ ಹಬ್ಬ ಇದಾಗಿದೆ . ಹೊಸ ಬಟ್ಟೆಗಳನ್ನು ತೊಟ್ಟು , ಮನೆಯನ್ನು ದೀಪಗಳಿಂದ ಅಲಂಕರಿಸಿ , ಪಟಾಕಿಗಳನ್ನು ಹಚ್ಚಿ ಸಂಭ್ರಮಿಸುತ್ತಾರೆ.
ಈಗಿನ ಹಬ್ಬಕ್ಕೂ ನಾನು ಚಿಕ್ಕವಳಾಗಿದ್ದಾಗ ಆಚರಿಸುತ್ತಿದ್ದ ಹಬ್ಬಕ್ಕೂ ತುಂಬಾ ವ್ಯತ್ಯಾಸವಿದೆ. ಆಗೆಲ್ಲ ಹಬ್ಬ ಎಂದರೆ ಎಲ್ಲಿಲ್ಲದ ಸಡಗರ . ಒಂದು ವಾರದ ಮುಂಚೆಯೇ ಹೊಸಬಟ್ಟೆಗಳನ್ನು ಖರೀದಿಸಿ, ಹಬ್ಬ ಬರುವುದನ್ನೇ ಎದಿರು ನೋಡುತ್ತಿರುತ್ತಿದ್ದೆ . ಇನ್ನು ಹಬ್ಬದ ದಿನವಂತೂ ಸಡಗರ ಹೇಳತೀರದು . ಬೆಳಗ್ಗಿನ ಜಾವ ಬೇಗನೆ ಎದ್ದು, ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆಯನ್ನು ತೊಟ್ಟು , ದೇವರ ಪೂಜೆ ಮಾಡಿ ದೇವಸ್ಥಾನಕ್ಕೆ ಹೊರಡುತ್ತಿದ್ದೆವು. ಆಮೇಲೆ ಕಜ್ಜಾಯ ತಿನ್ನುವ ಸಡಗರ . ಕಜ್ಜಾಯದ ತಯಾರಿಕೆಯಂತು 2-3 ದಿನದ ಮುಂಚೆಯೇ ನಡೆದಿರುತ್ತಿತ್ತು . ಅಮ್ಮ ಪಾತ್ರೆ ತುಂಬಾ ಕಜ್ಜಾಯ ಮಾಡಿರುತ್ತಿದ್ದರು . ಇಷ್ಟೆಲ್ಲಾ ಆದ ಮೇಲೆ ಸಂಜೆಗೆ ಪಟಾಕಿ ಹೊಡೆಯುವ ಸಂಭ್ರಮ. ಅಪ್ಪ ಇದರ ಬಗ್ಗೆ ತುಂಬಾ strict. ಪಟಾಕಿಯ ಮೇಲೆ ಹೆಚ್ಚಾಗಿ ದುಡ್ಡು ಸುರಿಯುತ್ತಿರಲಿಲ್ಲ. ನನಗೋ ಪಟಾಕಿ ಅಂದರೆ ತುಂಬಾ ಆಸೆ . ಆ ಬಾಣ ಬಿರಿಸು , ಸುರು ಸುರು ಬತ್ತಿ , ಫ್ಲವರ್ ಪಾಟ್ , ಲಕ್ಷ್ಮಿ ಪಟಾಕಿ , ಮತಾಪು , gun ಪಟಾಕಿ ಎಲ್ಲ ಇಷ್ಟ . ಆಕಾಶದೆತ್ತರಕ್ಕೆ ಹೋಗುವ ರಾಕೆಟ್ ಅನ್ನು ನೋಡುವುದೆಂದರೆ ಎಲ್ಲಿಲ್ಲದ ಆಸೆ . ಮನೆಮಂದಿಯೆಲ್ಲಾ ಸೇರಿ ಸ್ನೇಹಿತರು ಹಾಗು ನೆರೆಹೊರೆಯವರ ಜೊತೆ ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದೆವು. ಹೀಗೆ ಮೂರುದಿನಗಳ ಹಬ್ಬ ಯಾವಾಗ ಮುಗಿದಿತ್ತು ಅಂತ ಗೊತ್ತೇ ಆಗುತ್ತಿರಲಿಲ್ಲ .
ಆದರೆ ಈಗ life style ಬದಲಾಗಿದೆ . ಯಾವಾಗ ಹಬ್ಬ ಬಂದು ಹೋಯಿತೆನ್ನುವುದು ಗೊತ್ತೇ ಆಗುವುದಿಲ್ಲ . ಆಫೀಸ್ಗೆ ಒಂದು ದಿನ ರಜ ಸಿಕ್ಕಿರುತ್ತೆ ...ಹೀಗಾಗಿ ಹಬ್ಬದ ಆಚರಣೆ . ಆಚರಣೆ ಅನ್ನೋದಕ್ಕಿಂತ , relaxing ಅನ್ನುವುದು ಉತ್ತಮ . ಮುಂಚಿನ ಸಡಗರ ಈಗಿಲ್ಲ. ಹೊಸಬಟ್ಟೆ ತೊಟ್ಟು ದೇವಸ್ಥಾನಕ್ಕೆ ಹೋಗುವ ಪ್ರಕ್ರಿಯೆ ನಿಂತಿದೆ . ಈಗ ಎಲ್ಲ ತಿನಿಸುಗಳು ಹೊರಗಡೆ ದೊರೆಯುವುದರಿಂದ , ಮನೆಯಲ್ಲಿ ಮಾಡುವ ಸಿಹಿಪರ್ದಾರ್ಥಗಳು ಅಷ್ಟಕಷ್ಟೇ. ಇನ್ನು ಸ್ನೇಹಿತರಿಗೆ ಹಬ್ಬದ wishes ನ ತಿಳಿಸಲು ಒಂದು sms ಹೋಗಿರುತ್ತೆ. ಪಟಾಕಿಗಳ ಹುಚ್ಚು ಸಂಪೂರ್ಣ ಬಿಟ್ಟಿದೆ . ವಾಯುಮಾಲಿನ್ಯದ ಅರಿವು , ಅದರಿಂದ ದೇಹದ ಮೇಲಾಗುವ ದುಷ್ಪರಿಣಾಮಗಳ ತಿಳುವಳಿಕೆ ಹೆಚ್ಚಿದೆ.
ಕೆಲವು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡಿವೆಯಾದರೂ, ಎಲ್ಲೊ ನಮ್ಮ ಹಿಂದಿನ ಸಂಪ್ರದಾಯಗಳು ಈಗಿನ ಆಧುನಿಕತೆಯಲ್ಲಿ ಮರೆಯಾಗುತ್ತಿವೆ ಅನ್ನಿಸುತ್ತಿದೆ . ನಮ್ಮ ಯುವಪೀಳಿಗೆಗಳು ನಮ್ಮ ಪರಂಪರೆಯನ್ನು ಮರೆಯದಿರಲಿ ಎಂದು ಆಶಿಸೋಣ !!!
No comments:
Post a Comment